Wednesday, 1 October 2014

ಅರಿಶಿಣದೆಲೆ ಎಣ್ಣೆಯಿಂದ ಬೈಕ್‌ ಓಡಿಸಿ

ಅರಿಶಿಣದೆಲೆ ಎಣ್ಣೆಯಿಂದ ಬೈಕ್‌ ಓಡಿಸಿ

ಪೆಟ್ರೋಲ್‌ ಬೆಲೆ ದಿನದಿಂದ ದಿನಕ್ಕೆ ಗಗನಮುಖಿಯಾಗಿ ಏರುತ್ತಲೇ ಇದೆ. ಮತ್ತೊಂದೆಡೆ ಪರ್ಯಾಯ ಇಂಧನಕ್ಕಾಗಿ ಅನೇಕ ಪ್ರಯೋಗಗಳು ನಡೆಯುತ್ತಿವೆ. ಇಂಥ ಹೊತ್ತಿನಲ್ಲಿ ಅರಿಶಿಣದೆಲೆಯ ಎಣ್ಣೆ ಬಳಸಿ ಬೈಕ್ ಓಡಿಸುವ ಮೂಲಕ ಪೆಟ್ರೋಲ್‌ಗೆ ಪರ್ಯಾಯ ತೈಲವನ್ನು ಕಂಡುಕೊಂಡಿದ್ದಾರೆ ಬಳ್ಳಾರಿಯ ರಾವ್‌ ಬಹದ್ದೂರ್‌ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳು.
ಮೇವಿಗೂ ಬಳಕೆಯಾಗದ ಅರಿಶಿಣದ ಎಲೆಯಿಂದ ತೆಗೆದ ಎಣ್ಣೆಯಲ್ಲಿ ದ್ವಿಚಕ್ರ ವಾಹನ ಓಡಿಸುವ ಮೂಲಕ ಈ ವಿದ್ಯಾರ್ಥಿಗಳು ಹೊಸ ಪ್ರಯೋಗ ಮಾಡಿದ್ದಾರೆ. ಒಂದು ಲೀಟರ್‌ ಅರಿಶಿಣದೆಲೆಯ ಎಣ್ಣೆಗೆ 40ರಿಂದ 50 ರೂಪಾಯಿ ವೆಚ್ಚವಾಗುತ್ತದೆ. ಒಂದು ಲೀಟರ್‌ಗೆ 65ರಿಂದ 70 ಕಿ.ಮೀ ಇಂಧನ ಕ್ಷಮತೆ (ಮೈಲೇಜ್‌) ದೊರೆಯುತ್ತದೆ.
‘ಕೇರಳದಲ್ಲಿ ಅರಿಶಿಣದ ಎಲೆಯನ್ನು ಆಯುರ್ವೇದ ಸೇರಿದಂತೆ ಅನೇಕ ಉಪಯೋಗಗಳಿಗೆ ಬಳಸುತ್ತಾರೆ ಎಂಬುದು ತಿಳಿದಿತ್ತು. ನಾವು ಮೊದಲು ಹೊಂಗೆ ಎಣ್ಣೆ, ಟಯರ್‌ ಕರಗಿಸಿ ತೆಗೆದ ತೈಲದಿಂದ ಬೈಕ್‌ ಓಡಿಸಲು ಪ್ರಯತ್ನಿಸಿದೆವು. ಆದರೆ ಅದು ಫಲ ಕೊಡಲಿಲ್ಲ. ನಂತರ ನಮಗೆ ಕಂಡದ್ದು ಅರಿಶಿಣದ ಎಲೆ.  ಒಮ್ಮೆ ಅರಿಶಿಣದ ಎಣ್ಣೆಯನ್ನು ನಮ್ಮ ಕಾಲೇಜಿನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದೆವು. ಪೆಟ್ರೋಲ್ ಹಾಗೂ ಈ ಎಣ್ಣೆಯ ಥರ್ಮಲ್‌ ಪ್ರಾಪರ್ಟೀಸ್‌ ಒಂದೇ ಆಗಿತ್ತು. ಅರಿಶಿಣದೆಲೆಯ ಎಣ್ಣೆಗೆ ಬೆಂಕಿ ತಾಗಿಸಿದ ಕೂಡಲೇ ಪೆಟ್ರೋಲ್‌ನಂತೆ ಉರಿಯಲಾರಂಭಿಸಿತು. ಆಗ ನಾವು ಬೈಕ್‌ಗೆ ಬಳಸಲು ಮುಂದಾದೆವು.
ಪ್ರಯೋಗಕ್ಕಾಗಿ ಮೊದಲಿಗೆ 100 ಎಂ.ಎಲ್‌ ಅರಿಶಿಣದೆಲೆಯ ಎಣ್ಣೆಯನ್ನು ತೆಗೆದುಕೊಂಡು ಬೈಕ್‌ನ ಪೆಟ್ರೋಲ್‌ ಟ್ಯಾಂಕ್‌ ಪಕ್ಕದಲ್ಲಿ ಸಣ್ಣ ಬಾಟಲಿ ಅಳವಡಿಸಿದೆವು. ಬಾಟಲಿಯಿಂದ ಎಂಜಿನ್‌ಗೆ ಸಂಪರ್ಕ ಕಲ್ಪಿಸುವ ಮಧ್ಯಭಾಗದ ಕೊಳವೆಗೆ ಎರಡು ಮ್ಯಾಗ್ನಟೈಜರ್‌ (ಕಾಂತೀಕಾರಕ) ಕ್ಲಿಪ್‌ಗಳನ್ನು ಅಳವಡಿಸಿದೆವು. ಈ ಮ್ಯಾಗ್ನಟೈಜರ್‌ಗಳು ಇಂಧನ ಕ್ಷಮತೆ ಹೆಚ್ಚಾಗಲು ಸಹಕರಿಸುತ್ತವೆ ಮತ್ತು ಎಂಜಿನ್‌ನಲ್ಲಿ ಕಾರ್ಬನ್‌ ಉಳಿಯದಂತೆ ತಡೆಯುತ್ತವೆ. 100 ಎಂ.ಎಲ್‌ ತೈಲದಿಂದ ಏಳು ಕಿ.ಲೋ ಮೀಟರ್‌ ಬೈಕ್‌ ಓಡಿಸಿದೆವು’ ಎನ್ನುತ್ತಾರೆ ಅರುಣ್‌ ಕುಮಾರ್ ಜಿ.
ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ 8ನೇ ಸೆಮಿಸ್ಟರ್‌ ಅಭ್ಯಾಸ ಮಾಡುತ್ತಿರುವ ಅರುಣ್‌ ಕುಮಾರ್‌, ಪ್ರಶಾಂತ್‌, ರವಿ, ಚನ್ನವೀರಯ್ಯ ಅವರು ಆರು ತಿಂಗಳ ಶ್ರಮದಿಂದ ಈ ಪ್ರಯೋಗವನ್ನು ಯಶಸ್ವಿಗೊಳಿಸಿದ್ದಾರೆ. ಇವರಿಗೆ ಮಾರ್ಗದರ್ಶನ ನೀಡಿದವರು ಡಾ. ಹೀರೇಗೌಡರ್‌ ಯರ್ರನಗೌಡ ಹಾಗೂ ವಿಭಾಗದ ಮುಖ್ಯಸ್ಥ ಕೋರಿ ನಾಗರಾಜ್‌.
‘ಅರಿಶಿಣದ ಎಲೆಯ ತೈಲದಿಂದ ಓಡಿಸುವ ಬೈಕ್‌ ಪರಿಸರ ಸ್ನೇಹಿಯಾಗಿದೆ, ಹೆಚ್ಚು ಹೊಗೆ ಉಗುಳುವುದಿಲ್ಲ. ಇದಕ್ಕೆ ಸಾಕ್ಷಿ ಸಾರಿಗೆ ಇಲಾಖೆಯಿಂದ ಸಿಕ್ಕಿರುವ ಎಮಿಷನ್‌ ಪರೀಕ್ಷೆಯ ಪ್ರಮಾಣ ಪತ್ರ. ಈ ಎಣ್ಣೆಯಿಂದ ಎಂಜಿನ್‌ಗೂ ಹಾನಿಯಾಗುವುದಿಲ್ಲ ಎಂಬುದನ್ನು ಮೆಕ್ಯಾನಿಕ್‌ಗಳು ಪರೀಕ್ಷಿಸಿ, ದೃಢೀಕರಿಸಿದ್ದಾರೆ. ಆದ್ದರಿಂದ ನಮ್ಮ ಈ ಪ್ರಯತ್ನವನ್ನು ಎಲ್ಲೆಡೆ ಕಾರ್ಯರೂಪಕ್ಕೆ ತರಲು ಏನೂ ತೊಂದರೆ ಇಲ್ಲ. ಅಲ್ಲದೇ ಪ್ರಪಂಚದ ಉತ್ಪಾದನೆಯಲ್ಲಿ ಶೇ.75ರಷ್ಟು ಅರಿಶಿಣವನ್ನು ಭಾರತದಲ್ಲೇ ಬೆಳೆಯಲಾಗುತ್ತಿದೆ. ಹಾಗಾಗಿ ಪೆಟ್ರೋಲ್‌ಗೆ ಪರ್ಯಾಯವಾಗಿ ಅರಿಶಿಣದೆಲೆಯ ಎಣ್ಣೆಯನ್ನು ಮುಂದಿನ ದಿನಗಳಲ್ಲಿ ಬಳಸಿಕೊಂಡರೆ ಸಾರ್ವಜನಿಕರು ಹಾಗೂ ಸರ್ಕಾರಕ್ಕೂ ಬಹುದೊಡ್ಡ ಅನುಕೂಲವಾಗಲಿದೆ ಎಂಬುದು ಈ ವಿದ್ಯಾರ್ಥಿಗಳ ಅಭಿಪ್ರಾಯ.
ಮಾಹಿತಿಗೆ: 91644 26568.

ಗರ್ಭಧಾರಣೆ ಆಗಿಲ್ಲವೇ?

ಮಾಹಿತಿಗೆ: vasan@manipalankur.com

ಬರುತ್ತಿದೆ ‘ಪ್ರಾಸ್ಟೇಟ್‌ ಕ್ಯಾನ್ಸರ್‌’

ಪುರುಷರಿಗೆ ವಯಸ್ಸಾಗುತ್ತಿದ್ದಂತೆ ಆರೋಗ್ಯ ಸಂಬಂಧಿ ಅನೇಕ ಸಮಸ್ಯೆಗಳು ಕಾಣಸಿಕೊಳ್ಳುತ್ತವೆ. ಆದರೆ ಬದಲಾದ ಜೀವನ ಶೈಲಿ, ಆನುವಂಶಿಕ ಕಾರಣದಿಂದ ಬರುವ ಪ್ರಾಸ್ಟೇಟ್‌ (ಮೂತ್ರಕೋಶದ ಕಂಠ) ಕ್ಯಾನ್ಸರ್‌ ಇಂದು ಭಾರತದಲ್ಲಿ 15 ಮಂದಿಗೆ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ.
ಅಮೆರಿಕದಲ್ಲಿ ಚರ್ಮ ಕ್ಯಾನ್ಸರ್‌ ನಂತರ ಹೆಚ್ಚು ಬಲಿಯಾಗುತ್ತಿರುವುದು ಈ ಪ್ರಾಸ್ಟೇಟ್‌ ಕ್ಯಾನ್ಸರ್‌ಗೆ. ಅಲ್ಲಿ ಆರು ಮಂದಿಗೆ ಒಬ್ಬರಲ್ಲಿ ಈ ರೋಗ ಕಂಡುಬರುತ್ತಿದೆ. ಭಾರತದಲ್ಲೂ ಕಳೆದ ಹದಿನೈದು ವರ್ಷಗಳಿಂದ ಈ ಕ್ಯಾನ್ಸರ್‌ಗೆ ಬಲಿಯಾಗುತ್ತಿರುವವರು ಕಂಡು ಬರುತ್ತಿರುವುದು ವೃದ್ಧರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಭಾರತೀಯರಲ್ಲಿ ವಯಸ್ಸಾಗುತ್ತಿದ್ದಂತೆ ಮಧುಮೇಹ, ಅಧಿಕ ರಕ್ತದೊತ್ತಡ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳು. ಇವುಗಳ ಜೊತೆಗೆ ಇಂಥ ಕಾಯಿಲೆಗಳು ಪ್ರವೇಶ ಮಾಡುತ್ತಿರುವುದು ಭಯ ಹುಟ್ಟಿಸುವಂತ ಸಂಗತಿಯಾಗಿದೆ. ವ್ಯಾಯಾಮವಿಲ್ಲದ ಜೀವನ, ಆನುವಂಶಿಕವಾಗಿ, ಅತೀಯಾದ ಮಾಂಸಾಹಾರ ಸೇವನೆಯಿಂದ ಪ್ರಾಸ್ಟೇಟ್‌ ಕ್ಯಾನ್ಸರ್‌ ಬರುವ ಸಾಧ್ಯತೆಗಳಿವೆ.
ಪ್ರಾಸ್ಟೇಟ್‌ ಕ್ಯಾನ್ಸರ್‌ ನಾಲ್ಕು ಹಂತಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಎರಡು ಹಂತಗಳಲ್ಲಿ ಕಾಣಿಸಿಕೊಂಡರೆ, ಮತ್ತೆ ಕೆಲವರಲ್ಲಿ ಮೂರನೇ ಹಂತ ತಲುಪಿದಾಗ ಕಂಡು ಬರುತ್ತದೆ. ಪದೇಪದೇ ಮೂತ್ರ ವಿಸರ್ಜನೆ, ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಕಾಲು ನೋವು ಬರುವುದು ಈ ರೋಗದ ಲಕ್ಷಣಗಳಾಗಿವೆ. ಅಮೆರಿಕದಲ್ಲಿ 1ಮತ್ತು 2ನೇ ಹಂತ ತಲುಪಿದರೆ ಸಾಕು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಆದರೆ ಭಾರತದಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಬೇಕಿದೆ ಎಂಬುದು ತಜ್ಞ ವೈದ್ಯರ ಅಭಿಪ್ರಾಯ.
ಈ ಕಾಯಿಲೆ 60 ವರ್ಷ ಮೇಲ್ಪಟ್ಟ ಶೇ. 40ರಿಂದ 45 ರಷ್ಟು ಮಂದಿಯಲ್ಲಿ ಕಂಡು ಬರುವ ಸಾಧ್ಯತೆ ಇದೆಯಂತೆ. ಭಾರತದಲ್ಲಿ 1ಮತ್ತು 2ನೇ ಹಂತ ತಲುಪಿದಾಗ ವೈದ್ಯರ ಬಳಿ ಬರುವವರ ಪ್ರಮಾಣ ಶೇ. 20ರಷ್ಟಿದ್ದರೆ, 3 ಮತ್ತು 4ನೇ ಹಂತ ತಲುಪಿದಾಗ ಬರುವವರ ಸಂಖ್ಯೆ ಶೇ. 80ರಷ್ಟಿದೆ. ಇಂಥ ಸಂದರ್ಭಗಳಲ್ಲಿ ರೋಗ ಗುಣಮುಖವಾಗುವ ಸಾಧ್ಯತೆ ಕಡಿಮೆ ಇರುತ್ತದೆ. 3ನೇ ಹಂತ ತಲುಪಿದಾಗ ಶಸ್ತ್ರಚಿಕಿತ್ಸೆ ಅಥವಾ ರೇಡಿಯೇಷನ್‌ ಮೂಲಕ ಕಾಯಿಲೆ ಗುಣಪಡಿಸಬಹುದು. ಐವತ್ತು ವರ್ಷ ದಾಟಿದ ಪ್ರತಿಯೊಬ್ಬ ಪುರುಷ ತಜ್ಞ ಮೂತ್ರಶಾಸ್ತ್ರಜ್ಞರನ್ನು ಭೇಟಿ ಮಾಡಬೇಕು. ಪಿ.ಎಸ್‌.ಎ. (Prostate Specific Antigen) ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ರೋಗ ಪತ್ತೆ ಹಚ್ಚಬಹುದು ಎನ್ನುತ್ತಾರೆ ವೈದ್ಯರು.
‘ಈ ಪ್ರಾಸ್ಟೇಟ್‌ ಪುರಷರಿಗೆ ಮುಖ್ಯವಾದ ಗ್ರಂಥಿಯಾಗಿದೆ. ಇದರಿಂದ ಉತ್ಪತಿಯಾಗುವ ದ್ರವಕ್ಕೆ ವೀರ್ಯಾಣುಗಳನ್ನು ಸಂರಕ್ಷಿಸುವ ಗುಣವಿದೆ. ಪ್ರಾಸ್ಟೇಟ್‌ ಕ್ಯಾನ್ಸರ್‌ 1 ಮತ್ತು 2ನೇ ಹಂತದಲ್ಲಿರುವ ರೋಗಿಗಳಿಗೆ ರ್‌್ಯಾಡಿಕಲ್‌ ಪ್ರೊಸ್ಟಾಟೆಕ್ಟಮಿ ಚಿಕಿತ್ಸೆ, ಅಥವಾ ರೇಡಿಯೇಷನ್‌ ಮೂಲಕ ಗುಣಪಡಿಸಬಹುದು. 3 ನೇ ಹಂತ ತಲುಪಿದ್ದರೆ ಸರ್ಜರಿ ಹಾಗೂ ರೇಡಿಯೇಷನ್‌ ಎರಡೂ ಮಾಡಿಸಬೇಕಾಗುತ್ತದೆ. 4ನೇ ಹಂತದಲ್ಲಿದ್ದರೆ ಹಾರ್ಮೋನ್ ಥೆರಪಿ ಮಾಡುವ ಮೂಲಕ ನಿಯಂತ್ರಣಕ್ಕೆ ತರಬಹುದು. ಜೊತೆಗೆ ಕಿಮೋಥೆರಪಿಯನ್ನೂ ಮಾಡಬೇಕುತ್ತದೆ. ನಾಲ್ಕು ಹಂತ ದಾಟಿದವರು ನಾಲ್ಕರಿಂದ ಐದು ವರ್ಷ ಬದುಕಬಹುದು’ ಎನ್ನುತ್ತಾರೆ ಗ್ಲೋಬಲ್‌ ಪ್ರಾಸ್ಟೇಟ್‌ ಡಿಸೀಸ್‌ ಫೌಂಡೇಷನ್ನಿನ ಅಧ್ಯಕ್ಷ ಎಸ್‌.ಕೆ. ರಘುನಾಥ್‌.
ಬೆಂಗಳೂರಿನಲ್ಲಿ ಒಂದು ಲಕ್ಷ ಜನರಲ್ಲಿ ಎಂಟು ಮಂದಿಗೆ ಪ್ರಾಸ್ಟೇಟ್‌ ಕ್ಯಾನ್ಸರ್‌ ಲಕ್ಷಣ ಕಂಡು ಬರುತ್ತಿದೆಯಂತೆ. ಇತ್ತೀಚೆಗೆ ಬೆಂಗಳೂರಿನ
ಲೀ ಮೆರಿಡಿಯನ್‌ ಹೋಟೆಲ್‌ನಲ್ಲಿ ಬೆಂಗಳೂರು ಯೂರಾಲಜಿಕಲ್‌ ಸೊಸೈಟಿ ಸಹಯೋಗದೊಂದಿಗೆ ಗ್ಲೋಬಲ್‌ ಪ್ರಾಸ್ಟೇಟ್‌ ಡಿಸೀಸ್‌ ಫೌಂಡೇಷನ್‌ ‘ಪ್ರಾಸ್ಟೇಟ್‌ ಕ್ಯಾನ್ಸರ್‌’ ಕುರಿತು ಸಮಾವೇಶ ಆಯೋಜಿಸಿತ್ತು. ಈ ಸಮಾವೇಶದಲ್ಲಿ ‘ಪ್ರಾಸ್ಟೇಟ್‌ ಕ್ಯಾನ್ಸರ್‌’ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ರೋಗ ತಡೆಗಟ್ಟುಲು ಕೈಗೊಳ್ಳಬೇಕಾದ ಕ್ರಮಗಳು ಮಾಂಸಾಹಾರ ಕಡಿಮೆ ಮಾಡುವುದು, ಅರಿಶಿಣ ಬಳಸಿದ ಆಹಾರ ಸೇವನೆ, ಬೆಳಿಗ್ಗೆ ಹಾಗೂ ಸಂಜೆ ಒಂದು ಗಂಟೆ ವ್ಯಾಯಾಮ, ಹಣ್ಣುಗಳನ್ನು ಹೆಚ್ಚಾಗಿ ತಿನ್ನಬೇಕು ಹಾಗೂ ಧೂಮಪಾನ ಮಾಡಬಾರದು.

ಬಾಲ್ಯದಲ್ಲೇ ಬೆಳ್ಳಿಗೆರೆ

ನೀವೆಷ್ಟು ಗಂಟೆ ನಿದ್ದೆ ಮಾಡುತ್ತೀರಿ? ಏನುಣ್ಣುತ್ತೀರಿ? ಎಷ್ಟು ಗಂಟೆಗೆ ಎದ್ದೇಳುತ್ತೀರಿ? ಇವೆಲ್ಲಕ್ಕೂ ಉತ್ತರ ಕೊಡುತ್ತಲೇ ಒಮ್ಮೆ ತಲೆಯನ್ನು ಗಮನಿಸಿ, ಅಲ್ಲಲ್ಲಿ ಬೆಳ್ಳಿಗೆರೆ ಇಣುಕಿದೆಯೇ?
ಸಾಮಾನ್ಯವಾಗಿ ಮುಂದಲೆಯಲ್ಲಿಯೇ ಮೊದಲು ಇಣುಕುವ ಈ ಬಿಳಿ ಕೂದಲಿಗೂ ನಮ್ಮ ಜೀವನಶೈಲಿಗೂ ನೇರ ನಂಟಿದೆ. ಇದನ್ನು ಬೆಂಗಳೂರಿನ ಹೇರ್‌ಲೈನ್‌ ಸ್ಟುಡಿಯೊದ ಅಧ್ಯಯನ ಸಾಬೀತು ಪಡಿಸಿದೆ. ಕಳೆದ ವರ್ಷ ಅವರ ಬಳಿ ಬಾಲನೆರೆ ಮತ್ತು ಅಕಾಲ ನೆರೆಯ ಸಮಸ್ಯೆಯ ಚಿಕಿತ್ಸೆಗೆ ಬಂದವರನ್ನು ಅಧ್ಯಯನಕ್ಕೆ ಒಳಪಡಿಸಿದರು. ದಟ್ಟವಾದ, ಕಪ್ಪು ಕಾಂತಿಯುತ ಕೂದಲು ಎಲ್ಲರ ಕನಸಾಗಿತ್ತು.
ಆನುವಂಶೀಯ ಕಾರಣವಿಲ್ಲದಿದ್ದಲ್ಲಿ ಕೂದಲು ಬೆಳ್ಳಗಾಗಲು ಜೀವನಶೈಲಿಯೇ ನೇರ ಕಾರಣ ಎನ್ನುವುದು ಡಾ.ಸ್ವಾಗತಾ ಚಕ್ರವರ್ತಿ ಅವರ ಅಧ್ಯಯನದ ಫಲಿತಾಂಶ ಹೇಳುತ್ತದೆ.
ಇವರ ಅಧ್ಯಯನದ ಫಲಿತಾಂಶಗಳ ಪ್ರಕಾರ ಶೇ. 98ರಷ್ಟು ಜನರಲ್ಲಿ ವಿಟಮಿನ್‌ ಡಿ ಕೊರತೆ ಕಂಡು ಬಂದಿತ್ತು. ಶೇ 85ರಷ್ಟು ಜನರಲ್ಲಿ ಕಬ್ಬಿಣದ ಅಂಶದ ಕೊರತೆ ಕಂಡು ಬಂದಿತು. ಅರ್ಧಕ್ಕಿಂತ ಹೆಚ್ಚು ಜನರಲ್ಲಿ ಕ್ಯಾಲ್ಶಿಯಂ ಕೊರತೆ ಇದ್ದರೆ ಶೇ. 13ರಷ್ಟು ಜನರು ಸ್ಥೂಲಕಾಯದವರಾಗಿದ್ದರು. ಸಮಸ್ಯೆಗೆ ಕಾರಣ ತಿಳಿದ ಮೇಲೆ, ಪರಿಹಾರ ಹುಡುಕುವುದೂ ಕಷ್ಟವಾಗಿರಲಿಲ್ಲ. ಅವರ ಜೀವನಶೈಲಿಯನ್ನು ಸುಧಾರಿಸುವುದು ಮೊದಲ ಸವಾಲಾಗಿತ್ತು. ಸಮತೋಲನ ಆಹಾರ ಸೇವನೆಯ ಬಗ್ಗೆ ಹೆಚ್ಚು ಮಾಹಿತಿ ನೀಡಲಾಯಿತು. ಸ್ವಾಸ್ಥ್ಯಮಯ ಕೂದಲು ಮಾತ್ರ ಸುಂದರ ಕಾಣಬಹುದು.
ಕೂದಲಿನ ಆರೋಗ್ಯಕ್ಕೆ ಅವರ ಒತ್ತಡದ ಜೀವನವನ್ನು ಸರಿಪಡಿಸಲು ಸೂಕ್ತ ಸಲಹೆಗಳನ್ನು ನೀಡಲಾಯಿತು. ನಿಗದಿತ ಸಮಯದಲ್ಲಿ ನಿಯಮಿತವಾಗಿ ನಿದ್ದೆ ಮಾಡುವುದು. ಸಮತೋಲಿತ ಆಹಾರ ಸ್ವೀಕರಿಸುವುದು ತಲೆ, ಬುರುಡೆ ಹಾಗೂ ಕೂದಲನ್ನು ಸ್ವಚ್ಛವಾಗಿರಿಸುವುದು.
ಕೂದಲಿಗಾಗಿ ವಿಶೇಷ ತೈಲ ನೀಡಲಾಯಿತು. ಪೌಷ್ಟಿಕಾಂಶದ ಕೊರತೆ ನೀಗಿಸಲು ಪೂರಕ ಮಾತ್ರೆಗಳನ್ನು ನೀಡಲಾಯಿತು.
ಪೂರಕ ಮಾತ್ರೆಯಲ್ಲಿ ಬೇವು, ನೆಲ್ಲಿಕಾಯಿ, ಎಕ್ಲಿಪ್ತಾ ಆಲ್ಬಾದಂಥ ಗಿಡಮೂಲಿಕೆಗಳ ಮೂಲಕ ಕೂದಲ ಬುಡವನ್ನು ಭದ್ರಗೊಳಿಸಲು ಕ್ರಮಕೈಗೊಳ್ಳಲಾಯಿತು.
ಸೆಲೆನಿಯಂ, ಜಿಂಕ್‌, ಬಯೋಟಿನ್‌, ವಿಟಮಿನ್‌ ಬಿ ಕಾಂಪ್ಲೆಕ್ಸ್‌, ಫಾಲಿಕ್ ಆಸಿಡ್‌ ಮುಂತಾದ ಅಂಶಗಳನ್ನೂ ಈ ಮಾತ್ರೆ ಒಳಗೊಂಡಿದ್ದು, ಮಾತ್ರೆಗಳ ಸೇವನೆಯಿಂದ ಪೌಷ್ಟಿಕಾಂಶ ಕೊರತೆಯನ್ನು ನೀಗಿಸಲಾಯಿತು.
ಕಳೆದ ಎಂಟು ತಿಂಗಳಿಂದ ಈ ಮಾತ್ರೆಗಳ ಸೇವನೆ ಹಾಗೂ ಜೀವನಶೈಲಿಯಲ್ಲಿಯ ಬದಲಾವಣೆಯಿಂದಾಗಿ ರೋಗಿಗಳಲ್ಲಿ ಶೇ 40ರಷ್ಟು ಜನರಲ್ಲಿ ಅಕಾಲಿಕ ನೆರೆ ನಿಗ್ರಹಕ್ಕೆ ಬಂದಿದೆ ಎನ್ನುವುದನ್ನು ಅವರು ಅಂಕಿ ಅಂಶಗಳ ಮೂಲಕ ತೋರಿಸುತ್ತಾರೆ. ವಿರಳಾತೀವಿರಳ ಎಂಬಂತೆ, ಕೆಲವರಲ್ಲಿ ಬಿಳಿಯಾಗಿದ್ದ ಕೂದಲು ಕಪ್ಪು ಬಣ್ಣಕ್ಕೆ ಬದಲಾಗುತ್ತಿರುವುದೂ ಕಂಡು ಬಂದಿದೆ.
ಅಕಾಲ ನೆರೆಗೆ ಚಿಕಿತ್ಸೆ ಇದೆ. ಪೂರಕ ಮಾತ್ರೆ ಸೇವನೆ, ತೈಲ ಲೇಪನ ಹಾಗೂ ಜೀವನಶೈಲಿಯ ಬದಲಾವಣೆಯಿಂದಾಗಿ ಆರೋಗ್ಯವಂತ ಕೂದಲನ್ನು ಪಡೆಯಬಹುದಾಗಿದೆ. ಈ ಪೂರಕ ಮಾತ್ರೆ ಸೇವನೆ ಹಾಗೂ ಚಿಕಿತ್ಸೆಗಾಗಿ ಸಂಪರ್ಕಿಸಿ: 080 23551177​, 235511​88​
ಬಾಲನೆರೆ ತಡೆಯಬೇಕೆಂದರೆ...
*ಊಟದಲ್ಲಿ ನಾರಿನಂಶ ಇರಲಿ, ವಿಟಮಿನ್‌ ಡಿ ಕೊರತೆಯಾಗದಿರಲಿ, ಎಳೆ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದು ಹಿತ, ತಲೆ ಸ್ವಚ್ಛ ಮತ್ತು ಶುಭ್ರವಾಗಿರಿಸಿಕೊಳ್ಳಬೇಕು, ಸಾಧ್ಯವಿದ್ದಷ್ಟು ಮೈಲ್ಡ್‌ ಶಾಂಪೂ ಬಳಸಿ, ಒತ್ತಡ ಮುಕ್ತ ಜೀವನವನ್ನು ಕಳೆಯಬೇಕು. ಕೂದಲಿಗೆ ಪೋಷಕಾಂಶಗಳು    ದೊರೆಯುವಂತೆ ಸೊಪ್ಪು, ತರಕಾರಿ ಹಣ್ಣುಗಳನ್ನು ಹೇರಳವಾಗಿ ಸೇವಿಸಬೇಕು.
*ಕೇಶ ವಿನ್ಯಾಸಕ್ಕಾಗಿ ಕೂದಲನ್ನು ಆಗಾಗ ಗುಂಗುರುಗೊಳಿಸುವುದು, ನೇರ ಗೊಳಿಸುವುದು ಮುಂತಾದವುಗಳನ್ನು ಮಾಡುವುದು ಸಲ್ಲ. ಕೂದಲು ನೈಸರ್ಗಿಕವಾಗಿದ್ದಷ್ಟೂ ಆರೋಗ್ಯದಿಂದಿರುತ್ತವೆ. ಆರೋಗ್ಯ ಪೂರ್ಣವಾಗಿದ್ದಷ್ಟೂ ಚಂದ ಕಾಣಿಸುತ್ತವೆ, ಕೃತಕ ಬಣ್ಣಗಳ ಬದಲು ಮೆಹೆಂದಿ ಬಳಕೆ ಒಳಿತು

ಮಳೆಗಾಲದಲ್ಲಿ ಕೂದಲಿನ ಆರೈಕೆ

ಉಫ್‌... ಮಳೆಗಾಲ ಬಂತು ಎಂದು ನಿಟ್ಟುಸಿರು ಬಿಡುವುದು ಸಾಮಾನ್ಯ. ಆದರೆ ಮಳೆಗಾಲ ಬಂದೊಡನೆ ಕಾಳಜಿ ಮಾಡಬೇಕಾಗಿರುವ ಅಗತ್ಯದ ಕೆಲಸಗಳ ಸಾಲು ಹೆಚ್ಚುತ್ತದೆ. ಮನೆ ರಿಪೇರಿ, ಗಾಡಿ ಸರ್ವಿಸಿಂಗ್‌ ಇವಕ್ಕೆಲ್ಲ ಗಮನ ನೀಡುತ್ತೇವೆ. ಆದರೆ ನಮ್ಮ ದೇಹ? ಕೂದಲು, ಚರ್ಮ? ಈ ಬಗ್ಗೆ ಒಂದು ಸಣ್ಣ ನಿರ್ಲಕ್ಷ್ಯವೇ ಇರುತ್ತದೆ.
ಬೇಸಿಗೆಯಲ್ಲಿ ಕೇವಲ ಬೆವರಿನ ಸಮಸ್ಯೆ ಇರುತ್ತದೆ. ಮಳೆಗಾಲದಲ್ಲಿ ತಾಪಮಾನ ಮತ್ತು ವಾತಾವರಣದಲ್ಲಿಯ ಅತಿಯಾದ ಮಾಯಿಶ್ಚರೈಸರ್‌ನಿಂದಾಗಿ ಹಲವಾರು ಸಮಸ್ಯೆಗಳು ತಲೆದೋರುತ್ತವೆ.
ತಲೆಯದ್ದೇ ಒಂದು ಸಮಸ್ಯೆ. ಮಳೆಯಲ್ಲಿ ನೆನೆದರಂತೂ ಕೂದಲು ಜಿಗುಟಾಗಿ, ಕೆರೆತ, ಹೊಟ್ಟು ಎಲ್ಲವೂ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಸಹಜವಾಗಿ ಕೂದಲು ಒಣಗಿಸಲಾಗದು. ಗಾಳಿಯಲ್ಲಿಯೂ ತೇವಾಂಶ ಇರುವುದರಿಂದ ಸಹಜವಾಗಿಯೇ ಕೂದಲಿನಲ್ಲಿ ನೀರು ಇಳಿಯುತ್ತದೆ. ಇದರ ಪರಿಣಾಮ ಕೂದಲು ಜಿಡ್ಡಾಗುತ್ತವೆ.
ಇದಲ್ಲದೆ, ಮಳೆಗಾಲವೆಂದು ನೀರು ಶುದ್ಧೀಕರಿಸಲು ಕ್ಲೋರಿನ್‌ ಮುಂತಾದ ರಾಸಾಯನಿಕಗಳನ್ನು ಸುರಿಯಲಾಗಿರುತ್ತದೆ. ಅವು ಬ್ಯಾಕ್ಟೇರಿಯಾಗಳನ್ನು ಕೊಲ್ಲುವುದೇನೋ ನಿಜ. ಆದರೆ ನಮ್ಮ ಕೂದಲಿನ ಬುಡವನ್ನು ನಿಶ್ಯಕ್ತಗೊಳಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಕ್ಲೋರಿನ್‌ನಿಂದಾಗಿ ಚರ್ಮ ಒಣಗುತ್ತದೆ. ಕೆರೆತ ಉಂಟಾಗುತ್ತದೆ.  ಕೆಲವೊಮ್ಮೆ ಕೂದಲು ತುಂಡರಿಸಬಹುದು.
ಮಳೆಯಲ್ಲಿ ಸಿಲುಕಿಕೊಂಡು ತಲೆ ತೊಯ್ದು ಹೋದರೆ, ಮನೆಗೆ ಹೋದೊಡನೆ ತಲೆಸ್ನಾನ ಮಾಡುವುದು ಒಳಿತು. ಮಳೆನೀರಿನೊಂದಿಗೆ ವಾತಾವರಣದಲ್ಲಿರುವ ಮಾಲಿನ್ಯವೂ ಸೇರಿ, ಕೂದಲಿಗೆ ಹಾನಿಯಾಗುತ್ತವೆ. ಕೂದಲುದುರುವುದು, ತುಂಡರಿಸುವುದು, ಗಂಟುಗಂಟಾಗುವುದು ಮುಂತಾದ ಸಮಸ್ಯೆಗಳು ಕಂಡು ಬರುತ್ತವೆ. 
ಮಳೆಗಾಲ ಕಳೆಯುವವರೆಗೂ ಹೊಟ್ಟು ನಿವಾರಣೆಯ ಅಂಶವುಳ್ಳು ಶಾಂಪೂವನ್ನು ನಿಗದಿತವಾಗಿ ಬಳಸುವುದು ಒಳಿತು.
ಮಳೆಗಾಲದಲ್ಲಿ ಕೂದಲನ್ನು ನೇರಗೊಳಿಸುವುದು, ಇಲ್ಲವೇ ಗುಂಗುರುಗೊಳಿಸುವುದು ಹಾಗೂ ಬಣ್ಣ ಹಾಕುವುದು ಮುಂತಾದ ಚಿಕಿತ್ಸೆಗಳನ್ನು ಮುಂದೂಡಿದರೆ ಒಳಿತು.
ಈ ಚಿಕಿತ್ಸೆಗಳನ್ನು ಮಳೆಗಾಲದಲ್ಲಿ ಮಾಡಿಸುವುದರಿಂದ ಕೂದಲು ಒಣಗಿಸುವ ಸಮಸ್ಯೆಯೂ ಇರುತ್ತದೆ. ಜೊತೆಗೆ ಉಷ್ಣ ಕಾರಕಗಳನ್ನು ಬಳಸಿ ಚಿಕಿತ್ಸೆ ನೀಡುವುದರಿಂದ ಕೂದಲು ಹಾನಿಗೊಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ಚಿಕಿತ್ಸೆಯಿಂದಾಗಿ ಕೂದಲು ಸೀಳುವುದು, ತುಂಡರಿಸುವುದು, ಬಲಹೀನವಾಗುವುದು. ದಟ್ಟ ಕೂದಲಿನ ಸಾಂದ್ರತೆ ಕಡಿಮೆಯಾಗಬಹುದು.
ಇದೇ ಕಾರಣದಿಂದಾಗಿ ಮಳೆಗಾಲದಲ್ಲಿ ಕೂದಲು ಕಾಂತಿಹೀನವಾಗಿ, ಬಲಹೀನವಾಗಿ, ಸೀಳುಗಳಿಂದ ಕೂಡಿದಂತೆ ಕಾಣುತ್ತವೆ. ಸಾಲದ್ದಕ್ಕೆ ತಲೆ ಹೊಟ್ಟಿನ ಸಮಸ್ಯೆ, ಕೆರೆತದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳ ಬಗ್ಗೆ ಮುಂದಿನ ವಾರ ಚರ್ಚಿಸಲಾಗುವುದು.
(ಮಾಹಿತಿಗೆ: 7676757575)

ಮಧುಮೇಹ ಮಾನಸಿಕ ತುಮುಲ

ಮೂರು ದಿನಗಳ ಹಿಂದಷ್ಟೇ ಆ ಮಹಿಳೆಗೆ ಮಧುಮೇಹ ಇರುವುದು ದೃಢಪಟ್ಟಿತ್ತು. ತನಗೆ ಮಧುಮೇಹ ಇದೆ ಎಂಬುದನ್ನು ಅವರಿಗೆ ಒಪ್ಪಿಕೊಳ್ಳಲಾಗುತ್ತಿರಲಿಲ್ಲ. ಇನ್ನು ತಮ್ಮ  ದಿನಚರಿ ರೂಢಿಸಿಕೊಳ್ಳುವುದು, ಆಹಾರ ಪದ್ಧತಿ ಬದಲಿಸಿಕೊಳ್ಳುವುದು, ನಿಯಮಿತ ವಾಕಿಂಗ್- ವ್ಯಾಯಾಮ ಮಾಡುವುದು ಹೇಗೆ ಎಂದು ಅವರು ಗಾಬರಿಯಾಗಿದ್ದರು.
ಇದನ್ನೆಲ್ಲಾ ಮೊದಲೇ ಮಾಡಿದ್ದರೆ ಮಧುಮೇಹ ಬರುತ್ತಿರಲಿಲ್ಲವೇನೋ, ತಾನೇ ತರಿಸಿಕೊಂಡೆನೇನೂ ಎಂಬ ತಪ್ಪಿತಸ್ಥ ಭಾವನೆ. ಪದೇ ಪದೇ ತಾನು ಡುಮ್ಮಿ, ಕುರೂಪಿ, ಜತೆಗೆ ರೋಗಿಷ್ಟೆಯಾದೆ ಎಂಬ ಬೇಸರ. ಈ ಭಾವನೆಗಳ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗದೇ ಮತ್ತೆ ವೈದ್ಯರ ಬಳಿ ಓಡಿ ಬಂದಿದ್ದಳು.
ಇನ್ನೊಬ್ಬರಿಗೆ ಮಧುಮೇಹ ಇರುವ ಪತಿಯ ಸಿಟ್ಟು- ಸೆಡವು ಸಹಿಸಲಾಗುತ್ತಿಲ್ಲ ಎಂಬ ಅಸಹಾಯಕತನ. 20 ವರ್ಷದಿಂದ ಟೈಪ್–2 ಡಯಾಬಿಟಿಸ್ ಇರುವ ಪತಿ  ಕಳೆದ ನಾಲ್ಕು ತಿಂಗಳಿಂದ ವಿಪರೀತವಾಗಿ ಆಡುತ್ತಿದ್ದ. ಅತಿರೇಕದ ವರ್ತನೆಯಿಂದ ನಿಮಿಷ ನಿಮಿಷವೂ ಆತಂಕದಿಂದ ಕಳೆಯುವ ಸ್ಥಿತಿ ಅವರದ್ದಾಗಿತ್ತು.
ಮಧುಮೇಹದಂತಹ ಸ್ಥಿತಿ ಎದುರಾದಾಗ ರೋಗಿಯ ಮೇಲೆ ಉಂಟಾಗುವ ಮಾನಸಿಕ ಆಘಾತಕ್ಕೆ ಇವು ಉದಾಹರಣೆಗಳಷ್ಟೆ. ಎಲ್ಲ ದೀರ್ಘಕಾಲೀನ ರೋಗಗಳು ರೋಗಿಯ ಮೇಲೆ ಭಾವನಾತ್ಮಕ ಪರಿಣಾಮ ಬೀರುತ್ತವೆ. ಆಧುನಿಕ ಔಷಧಗಳು ಕಾಯಿಲೆಗಳನ್ನು ವಾಸಿ ಮಾಡಬಹುದು ಅಥವಾ ನಿಯಂತ್ರಿಸಬಹುದು ಆದರೆ ಆತನನ್ನು ಭಾವನಾತ್ಮಕವಾಗಿ ಸದೃಢಗೊಳಿಸಲಾರವು. ಈ ರೋಗಗಳಿಂದ ಮನುಷ್ಯ ಸಾವನ್ನು ತಪ್ಪಿಸಿಕೊಂಡರೂ ಗುಣಮಟ್ಟದ ಜೀವನ ಸಾಗಿಸುವುದು ಕಷ್ಟ. ಇದೇ ಆತನನ್ನು ಭಾವನಾತ್ಮಕವಾಗಿ ಹೈರಾಣ ಮಾಡುವುದು. ಬೇಕಿದ್ದು ತಿನ್ನುವಂತಿಲ್ಲ, ಕೆಲವು ಪ್ರಕರಣಗಳಲ್ಲಿ ಕುಟುಂಬದ ಮೇಲೆ ಮಿತಿಮೀರಿದ ಅವಲಂಬಿತರಾಗಬೇಕಾಗುವುದು, ಜತೆಗೆ ಚಿಕ್ಕ ವಯಸ್ಸಿನಲ್ಲೇ ಬಂದರೆ ಉದ್ಯೋಗ- ಸಂಬಂಧಗಳ ಮೇಲೂ ಪರಿಣಾಮ ಬೀರುವುದರಿಂದ ರೋಗಿಯ ಮಾನಸಿಕ ತುಮುಲ ಕೆಲ ಬಾರಿ ಹತೋಟಿ ಮೀರಿ ಬಿಡುತ್ತದೆ.  ಇಷ್ಟೇ ಅಲ್ಲ, ರಕ್ತದಲ್ಲಿನ ಸಕ್ಕರೆ ಅಂಶದ ಏರಿಳಿತ ರೋಗಿಯ ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ.  ಖಿನ್ನತೆಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ.
ಡಯಾಬಿಟಿಸ್ ಬಂತು ಎಂದೊಡನೆಯೇ ತೂಕ ಇಳಿಸಿಕೊಳ್ಳಿ, ಸಕ್ಕರೆ ಇಲ್ಲದ ಪದಾರ್ಥ ತಿನ್ನಿ, ವ್ಯಾಯಾಮ ಮಾಡಿ, ಆಗಾಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಪಾಸಣೆ ಮಾಡಿಕೊಳ್ಳಿ, ಜತೆಗೆ ಮಾತ್ರೆಯನ್ನೋ ಅಥವಾ ಇನ್ಸುಲಿನ್ ಇಂಜೆಕ್ಷನ್ ಅನ್ನೋ ತೆಗೆದುಕೊಳ್ಳಿ ಎಂದು ವೈದ್ಯರು ಹೇಳುತ್ತಾರೆ. ಇದೆಲ್ಲ ಒಂದು ರೀತಿಯಲ್ಲಿ ರೋಗಿಯನ್ನು ಗೊಂದಲಕ್ಕೀಡು ಮಾಡುವುದು ಸತ್ಯ. ಮಧುಮೇಹ ಪತ್ತೆಯಾದ ಕೂಡಲೇ ಉಂಟಾಗಬಹುದಾದ ಆಘಾತಗಳು ಹಾಗೂ ವಹಿಸಬೇಕಿರುವ ಎಚ್ಚರಿಕೆ, ಅನುಸರಿಸಬೇಕಿರುವ ಮಾರ್ಗಗಳು ಇಲ್ಲಿವೆ:
*ಒಪ್ಪಿಕೊಳ್ಳದೇ ಇರುವುದು
ಮೊದಲಿಗೆ ತಮಗೆ ಮಧುಮೇಹವಿದೆ ಎಂಬುದನ್ನು ರೋಗಿ ಒಪ್ಪುವುದಿಲ್ಲ. 2-3 ಸಲ ದೃಢಪಟ್ಟ ಮೇಲೂ ತಾನು ಈಚೆಗೆ ತಿಂದಿದ್ದ ಸಿಹಿತಿನಿಸುಗಳಿಂದ ಸಕ್ಕರೆ ಅಂಶ ಏರಿಕೆಯಾಗಿದೆಯೇನೋ ಎಂದು ಸಂಶಯ ಪಡುತ್ತಾನೆ. ಇದು  ಮೊದಲ ಪ್ರತಿಕ್ರಿಯೆ. ಒಂದು ರೀತಿಯಲ್ಲಿ ಇದು ಒಳ್ಳೆಯದು. ನಿಧಾನವಾಗಿ ರೋಗಿ ಮಧುಮೇಹ ಇದೆ ಎಂಬುದನ್ನು ನಂಬುವುದರಿಂದ ಆಘಾತ ಆಗದು.  ಆದರೆ ಆದಷ್ಟು ಬೇಗ ರೋಗವಿದೆ ಎಂಬುದನ್ನು ಒಪ್ಪಿಕೊಂಡು ನಿಗದಿತ ಪಥ್ಯಾಹಾರ, ವ್ಯಾಯಾಮ ಜತೆಗೆ ಔಷಧ ಸೇವನೆಗೆ ಒಗ್ಗಿಕೊಳ್ಳುವುದು ಅತ್ಯಗತ್ಯ.
**ಗೊಂದಲ
ಬಹಳಷ್ಟು ಮಂದಿ ತಮ್ಮ ರಕ್ತದಲ್ಲಿನ ಸಕ್ಕರೆ ಅಂಶದ ಮಟ್ಟ ಹಾಗೂ ಔಷಧಗಳ ಕುರಿತು ಗೊಂದಲಕ್ಕೊಳಗಾಗುತ್ತಾರೆ.  ಯಾವ ಚಿಕಿತ್ಸೆಗೆ ಒಗ್ಗಿಕೊಳ್ಳಬೇಕು? ಯಾವ ಪದ್ಧತಿಯಲ್ಲಿ ರೋಗ ವಾಸಿಯಾಗಬಹುದು ಇಂಥವೇ ಅನುಮಾನಗಳ ನಡುವೆ ಹಲವು ವೈದ್ಯರನ್ನು ಎಡತಾಕುತ್ತಾರೆ. ಇದು ಗೊಂದಲವನ್ನು ಸೃಷ್ಟಿಸುತ್ತದೆ. ಕುಟುಂಬದ ವೈದ್ಯರ ಸಲಹೆಯಂತೆ ಮುಂದುವರಿಯುವುದು ಒಳಿತು.  ತಮ್ಮ ಸಕ್ಕರೆ ಮಟ್ಟ, ವ್ಯಾಯಾಮ, ಪಥ್ಯದ ಕುರಿತು ಡೈರಿ ಮಾಡಿಟ್ಟುಕೊಳ್ಳುವುದು ಉತ್ತಮ. ವೈದ್ಯರ ಬಳಿ ಏನೇನು ಕೇಳಿಕೊಳ್ಳಬೇಕು ಎಂಬ ತಿಳಿವಳಿಕೆಯೂ ಬರುತ್ತದೆ.
**ಸಿಟ್ಟು
ನನಗೇಕೆ ಈ ರೋಗ ಬಂತು?  ಹತೋಟಿಗೆ ಯಾಕೆ ಬರುತ್ತಿಲ್ಲ ಎಂಬ ಸಿಟ್ಟೂ ಕಾಡಬಹುದು. ಆದರೆ ಇದೇ ಸಿಟ್ಟಿನಿಂದ ಕಟ್ಟುನಿಟ್ಟಿನ ಪಥ್ಯ ಮಾಡಿ, ದೇಹದಂಡನೆ ಮಾಡಿದರೆ ಉತ್ತಮ ಆರೋಗ್ಯ ಹೊಂದಬಹುದು. 
**ಒತ್ತಡ
ಮಾನಸಿಕ ಒತ್ತಡ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಿಸುತ್ತದೆ ಎಂಬುದು ಅಧ್ಯಯನಗಳಿಂದ ದೃಢಪಟ್ಟಿವೆ. ಜತೆಗೆ ಒತ್ತಡದಲ್ಲಿ ಹೊತ್ತೊತ್ತಿಗೆ ಊಟ ಮಾಡುವುದು, ಮಾತ್ರೆ ತೆಗೆದುಕೊಳ್ಳುವುದು, ವ್ಯಾಯಾಮ ಎಲ್ಲ ಏರುಪೇರಾಗಿ ಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇರುತ್ತದೆ. ಸಕಾರಾತ್ಮಕ ಯೋಚನೆಯಿಂದ, ಶಿಸ್ತುಬದ್ಧವಾಗಿ ಬದುಕುವ ನಿರ್ಣಯದಿಂದ ಒತ್ತಡವನ್ನು ನಿಭಾಯಿಸಬಹುದಾಗಿದೆ. 
**ದುಃಖ
ಬಹಳ ಸಲ ಯಾರಿಗೂ ಬರದ ರೋಗವೊಂದು ತಮ್ಮ ಬದುಕನ್ನೇ ನುಂಗಿದೆ. ಸಾಯುವವರೆಗೂ ಮಾತ್ರೆಗಳೊಂದಿಗೆ ಬದುಕಬೇಕು ಎನ್ನುವ ದುಃಖ ಬಹುತೇಕ ಜನರಿಗೆ ಕಾಡುತ್ತದೆ. ಆದರೆ ಬದುಕಿಗಿಂತ ದೊಡ್ಡದು ಯಾವುದೂ ಇಲ್ಲ ಎಂಬ ಪರಮ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕಾಗುತ್ತದೆ.
**ಲೈಂಗಿಕ ದೌರ್ಬಲ್ಯ
ಇನ್ಸುಲಿನ್ ಡೋಸ್ ಆರಂಭಿಸುವಾಗ ಮಾನಸಿಕ ಏರು ಪೇರು ಉಂಟಾಗುವ ಸಾಧ್ಯತೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಲೈಂಗಿಕ ದೌರ್ಬಲ್ಯವೂ ಕಾಣಿಸಿಕೊಳ್ಳುತ್ತದೆ.
ಹಲವು ವರ್ಷಗಳಿಂದ ಡಯಾಬಿಟಿಸ್ ಇದ್ದವರಿಗೂ ಕೀಳರಿಮೆ, ತಾನು ಸಂಪೂರ್ಣನಲ್ಲ ಎಂಬ ಭಾವ, ಆತಂಕ, ಒತ್ತಡಗಳು ಆರಂಭವಾಗಿ ಖಿನ್ನತೆ, ಲೈಂಗಿಕ ನಿರಾಸಕ್ತಿಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಇವು ಸಂಬಂಧಗಳನ್ನೇ ನಾಶ ಮಾಡಬಹುದು.
ಅಧ್ಯಯನವೊಂದರ ಪ್ರಕಾರ ಡಯಾಬಿಟಿಸ್ ಇರುವ ನಾಲ್ವರು ಪುರುಷರಲ್ಲಿ ಒಬ್ಬರಿಗೆ ಲೈಂಗಿಕ ದೌರ್ಬಲ್ಯ ಉಂಟಾಗುವುದು ಕಂಡುಬಂದಿದೆ. ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ನಿಮಗೆ ಡಯಾಬಿಟಿಸ್ ಬಂತು ಎಂದೊಡನೆ ಬೇರೆ ರೀತಿ ವರ್ತಿಸುವಂತೆ ಭಾಸವಾಗುತ್ತದೆ. ಇದರಿಂದಾಗಿ ಏಕಾಂಗಿಯಾದ ಭಾವನೆಯೂ ಬರಬಹುದು.
**ನರಗಳ ನೋವು
ಮಧುಮೇಹ ಜೀವನಪೂರ್ತಿ ಜತೆಗಿರುವ ಸಂಗಾತಿ. ಇದರಿಂದಾಗಿ ನರಗಳ ನೋವು ಕಾಣಿಸಿಕೊಳ್ಳಬಹುದು. ಇದು ಗುಣವಾಗಲು ಹೆಚ್ಚು ಸಮಯ ಬೇಕಾಗಬಹುದು. ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಂಡು ನಿಯಮಿತ ವ್ಯಾಯಾಮ ಮಾಡಿದರೆ ಸಾಮಾನ್ಯವಾಗಿ ಯಾವುದೇ ಸಮಸ್ಯೆ ಉಂಟಾಗದು. ಅಷ್ಟಾದರೂ ಅಂಗೈ, ಅಂಗಾಲು ನೋವಿಗೆ ಔಷಧ ತೆಗೆದುಕೊಳ್ಳಬಹುದು.
**ಡಯಾಬಿಟಿಸ್ ಮತ್ತು ಖಿನ್ನತೆ
ಶೇ. 15ರಷ್ಟು ಡಯಾಬಿಟಿಸ್ ರೋಗಿಗಳನ್ನು ಖಿನ್ನತೆ ಕಾಡುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಪಥ್ಯ- ವ್ಯಾಯಾಮ- ಔಷಧಗಳತ್ತ ಗಮನ ವಹಿಸದ ರೋಗಿಗೆ ಮಧುಮೇಹ ಉಲ್ಬಣಗೊಳ್ಳುತ್ತದೆ.
ಸಕ್ಕರೆ ಅಂಶದ ಏರಿಳಿತ ರೋಗಿಗೆ ಸುಸ್ತು ಮಾಡುತ್ತದೆ, ಆತಂಕ ಉಂಟು ಮಾಡುತ್ತದೆ ಜತೆಗೆ ನಿದ್ರಾಹೀನತೆಗೂ ಕಾರಣವಾಗುತ್ತದೆ. ಈ ಲಕ್ಷಣಗಳು ಖಿನ್ನತೆಯಂತೆ ಕಂಡು ಬಂದರೂ ಇದು ಖಿನ್ನತೆ ರೋಗವಲ್ಲ. ಇದಕ್ಕೆ ಹಾರ್ಮೋನ್ ವೈಪರೀತ್ಯವೂ ಕಾರಣ. ವೈದ್ಯರು ಇದನ್ನು ನಿರ್ಧರಿಸಿ ಔಷಧ ನೀಡುತ್ತಾರೆ.
**ಸಕರಾತ್ಮಕ ಧೋರಣೆ: ಜೀವನದಲ್ಲಿಯ ಉತ್ತಮ, ಸಂತೋಷದ ಸಂಗತಿಗಳನ್ನು ನೆನೆಸಿಕೊಳ್ಳುವುದು, ಆಶಾವಾದವಿದ್ದರೆ ಯಾವುದೇ ರೋಗವೂ ಸಹ್ಯವಾಗುತ್ತದೆ.
**ನಿಮ್ಮ ಮೇಲೆ ನಿಮಗೆ ಕರುಣೆ ಇರಲಿ: ಮಾಡಲಾಗದ್ದನ್ನೆಲ್ಲ ಮಾಡಬೇಕೆಂಬ ಒತ್ತಡವನ್ನು ನಿಮ್ಮ ಮೇಲೆ ನೀವು ಹೇರಿಕೊಳ್ಳಬೇಡಿ. ನಿಮ್ಮಿಂದ ಎಷ್ಟು ಸಾಧ್ಯ ಎಂಬುದನ್ನು ನಿರ್ಧರಿಸಿ, ಅಷ್ಟೇ ಗುರಿ ಇಟ್ಟುಕೊಳ್ಳಿ.
**ಬದಲಾಯಿಸಲು ಸಾಧ್ಯವಿಲ್ಲದ್ದನ್ನು ಒಪ್ಪಿಕೊಳ್ಳಿ: ತೀರಾ ಒತ್ತಡ ಉಂಟು ಮಾಡುವಂತಹ ಪರಿಸ್ಥಿತಿ ಉಂಟಾಗದಂತೆ ನೋಡಿಕೊಳ್ಳಿ. ನಿಮ್ಮನ್ನು ನೀವು ಈ ಮೂರು ಪ್ರಶ್ನೆ ಕೇಳಿಕೊಳ್ಳಿ; 1) ಇನ್ನೆರಡು ವರ್ಷದ ನಂತರ ನನಗೆ ಈ ವಿಷಯ ಮುಖ್ಯವಾಗಿಯೇ ಇರುತ್ತದೆಯೆ? 2) ಪರಿಸ್ಥಿತಿ ಮೇಲೆ ನನಗೆ ನಿಯಂತ್ರಣವಿದೆಯೇ? 3) ನನ್ನ ಪರಿಸ್ಥಿತಿ ಬದಲಿಸಿಕೊಳ್ಳಲು ನನಗೆ ಸಾಧ್ಯವಿದೆಯೇ? ಇವುಗಳಿಗೆ ನಿಮ್ಮ ಮನಸ್ಸು ನೀಡುವ ಉತ್ತರದ ಆಧಾರದ ಮೇಲೆ ಮನಸ್ಸು ಗಟ್ಟಿಮಾಡಿಕೊಳ್ಳಿ.
**ಭಾವನೆ ಹಂಚಿಕೊಳ್ಳಿ: ನಿಮಗೆ ಏನೆನಿಸುತ್ತಿದೆ ಎಂಬುದನ್ನು ನಿಮ್ಮೊಳಗೆ ಇಟ್ಟುಕೊಂಡು ಕೊರಗಬೇಡಿ. ಕುಟುಂಬ ಸದಸ್ಯರ ಜತೆ ಅಥವಾ ಸ್ನೇಹಿತರ ಜತೆ ಹೇಳಿಕೊಳ್ಳಲು ಮುಜುಗರ ಎನಿಸಿದರೆ ಆಪ್ತ ಸಮಾಲೋಚಕರ ಸಹಾಯ ಪಡೆಯಿರಿ. 
**ವ್ಯಾಯಾಮ ಮಾಡಿ: ವ್ಯಾಯಾಮದಿಂದ ಒತ್ತಡ ಬಹಳಷ್ಟು ಕಡಿಮೆಯಾಗುತ್ತದೆ.
**ರಿಲ್ಯಾಕ್ಸ್ ಆಗಿ: ಒತ್ತಡದಿಂದ ಹಗುರಾಗಲು ಹಲವು ರೀತಿಯ ರಿಲ್ಯಾಕ್ಸ್ ಪದ್ಧತಿಗಳಿವೆ. ಸ್ನಾಯುಗಳ ವಿಶ್ರಮಿಸುವಿಕೆ, ದೀರ್ಘ ಶ್ವಾಸೋಚ್ಛಾಸ, ಧ್ಯಾನ ಮತ್ತಿತರ ಪದ್ಧತಿಗಳಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ವೈದ್ಯರ ಬಳಿ ಸಲಹೆ ಪಡೆದು ನಿಮಗೆ ಸರಿ ಅನಿಸಿದ ರಿಲ್ಯಾಕ್ಸ್ ಪದ್ಧತಿ ಅನುಸರಿಸಿ. ಒಟ್ಟಾರೆ ರೋಗ ಬಂತೆಂದು ಅಂಜದೆ  ಮಾನಸಿಕವಾಗಿ ಸಿದ್ಧಗೊಂಡರೆ ಅರ್ಧ ರೋಗವನ್ನು ಗೆದ್ದಂತೆ.
ಮಿಲನಕ್ಕೆ ಅಡ್ಡಿಯೇ?
ಮಧುಮೇಹ ಉಳ್ಳವರು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿರಿ­ಸಿಕೊಳ್ಳದಿದ್ದರೆ ಅವರ ಶೃಂಗಾರಮಯ ಬದುಕುಮಾಸಲಾಗುವುದು ಎನ್ನುತ್ತದೆ ವೈದ್ಯಲೋಕ.
ನಲ್ವತ್ತರ ನಂತರ ಪುರುಷ ಮತ್ತು ಮಹಿಳೆಯರಿಬ್ಬರಲ್ಲೂ ಒಬ್ಬರನ್ನೊಬ್ಬರು ಪ್ರೀತಿಸುವ, ಪಡೆಯುವ ಹಂಬಲ ಹೆಚ್ಚಿರುತ್ತದೆ. ಜೀವನ ಬಹುತೇಕ ಒಂದು ಹಂತ ತಲುಪಿರುತ್ತದೆ. ಬದುಕಿನ ಕೆನೆ ಸವಿಯುವ ಹಂತ ಇದು. ಆದರೆ ಇದಕ್ಕೆ ಅಡ್ಡಗಾಲು ಹಾಕುವುದೇ ಮಧುಮೇಹ ಮತ್ತು ರಕ್ತದ ಏರೊತ್ತಡದಂಥ ರೋಗಗಳು.
ಪುರುಷರಲ್ಲಿ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸದಿದ್ದಲ್ಲಿ ಉದ್ರೇಕದ ಸಮಸ್ಯೆ ಎದುರಾಗಬಹುದು. ಭಾವೋದ್ವೇಗದೊಂದಿಗೆ ದೇಹ ಸ್ಪಂದಿಸದೆ ಇರುವ ಸನ್ನಿವೇಶ ಉಂಟಾಗಬಹುದು. ಹೀಗಾದಾಗ ಪುರುಷರು ತಮ್ಮಲ್ಲಿಯೇ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಕೀಳರಿಮೆಯನ್ನು ಬೆಳೆಸಿಕೊಳ್ಳುತ್ತಾರೆ. ಮತ್ತೆ ಹೀಗಾಗಬಹುದು ಎನ್ನುವ ಆತಂಕ ಬೆಳೆಸಿಕೊಳ್ಳುತ್ತಾರೆ. ಈ ಆತಂಕ ಅವರ ರಸಗಳಿಗೆಗಳನ್ನೇ ನುಂಗಿಹಾಕುತ್ತದೆ.
ಮಹಿಳೆಯರಲ್ಲಿ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸದಿದ್ದಲ್ಲಿ ಯೋನಿ ದ್ರವ ಸ್ರವಿಸದೇ ಶುಷ್ಕ ಸಮಸ್ಯೆಯನ್ನು ಎದುರಿಸುತ್ತಾರೆ. ಇದರಿಂದಾಗಿ ಮಿಲನದ ಸಂದರ್ಭದಲ್ಲಿ ನೋವುಂಟಾಗಬಹುದು. ಅಥವಾ ಮಹಿಳೆಯರು ಸರಸಕೆ ಬಾರದೇ ಸಿಡಿಮಿಡಿ ಮಾಡಿಕೊಳ್ಳಬಹುದು. ಈ ಸಂದರ್ಭವೂ ಮಹಿಳೆಯರಲ್ಲಿ ಆತಂಕ ಮತ್ತು ನೋವಿನ ಭೀತಿಯನ್ನುಂಟು ಮಾಡುತ್ತದೆ. ಖಿನ್ನತೆಗೆ ದೂಡುತ್ತದೆ.
ಉರಿಮೂತ್ರದ ಲಕ್ಷಣವಿದ್ದರೂ ಈ ನೋವು, ಸಿಡಿಮಿಡಿಗೊಳ್ಳುವುದು ಮುಂತಾದವನ್ನು ಮಹಿಳೆಯರು ಅನುಭವಿಸುತ್ತಾರೆ. ಪುರುಷನ ಬಯಕೆಗೆ ಸ್ಪಂದಿಸದೇ ಇರುವ ಸಾಧ್ಯತೆಗಳೇ ಹೆಚ್ಚು. ಇದು ಕೆಲವೊಮ್ಮೆ ಇಬ್ಬರಲ್ಲಿಯೂ ಅಸಮಾಧಾನವನ್ನು ಹುಟ್ಟುಹಾಕಬಹುದು. ನಿರಾಸಕ್ತಿ ಹುಟ್ಟಲು ಕಾರಣವಾಗಬಹುದು. ಒಂದೆರಡು ಕ್ಷಣಗಳ ವೈಫಲ್ಯಕ್ಕೆ ಹುಟ್ಟುವ ನಿರಾಸಕ್ತಿಯು ಸಮಸ್ಯೆಯಾಗಿ ಬೆಳೆಯುತ್ತದೆ. ನಂತರ ಸುಮಧುರ ಕ್ಷಣಗಳು ಕೇವಲ ನೆನಪಾಗಿ ಮಾತ್ರ ಕಾಡಬಲ್ಲವು.
ಹಾಗಿದ್ದಲ್ಲಿ ಸುಖದೊಳು ಒಂದಾಗುವುದೇ ಕನಸಿನ ಮಾತೇ?
ಸಂಗಾತಿಯೊಂದಿಗೆ ಪರಸ್ಪರ ಈ ಬಗ್ಗೆ ಚರ್ಚಿಸಿದ್ದಲ್ಲಿ ಸಹಾನುಭೂತಿಯೊಂದಿಗೆ ಸಂಗಾತಿಯು ನಿಮ್ಮೊಂದಿಗೆ ಪಾಲ್ಗೊಳ್ಳುತ್ತಾರೆ.
ಇಲ್ಲ. ಇಂಥ ಸಂದರ್ಭಗಳು ಉಂಟಾದಾಗಲೆಲ್ಲ, ಆ ಸನ್ನಿವೇಶ ಅಂದಿಗೆ ಮಾತ್ರ ಸೀಮಿತ ಎಂದುಕೊಳ್ಳಬೇಕು.  ಇಷ್ಟಕ್ಕೂ ನಿಮ್ಮ ಪ್ರಣಯದ ಅಂತ್ಯ ಸಂಭೋಗದಲ್ಲಿಯೇ ಕೊನೆಗಾಣಬೇಕೆಂದೂ ಇಲ್ಲ. ಪರಸ್ಪರ ಮೆಚ್ಚುಗೆ ಮತ್ತು ಮುತ್ತಿನ ಮತ್ತು ಇಬ್ಬರನ್ನೂ ಹತ್ತಿರಕ್ಕೆ ತರುತ್ತದೆ. ಮುನ್ನಲಿವಿನಲ್ಲಿ ತೊಡಗಿಸಿಕೊಳ್ಳಬೇಕು. ಪ್ರೀತಿ ಜಾಗೃತವಾಗಿದ್ದಲ್ಲಿ ಯಾವುದೇ ಅಡೆತಡೆಯಾಗದು. ನೋವು ತಾರದು. ಮಾನಸಿಕವಾಗಿ ಪ್ರಫುಲ್ಲರಾಗಿರಬೇಕು.
ಯಾವುದೇ ಕಾರಣಕ್ಕೂ ಜಾಹೀರಾತುಗಳಿಗೆ ಮಾರುಹೋಗಿ ಪ್ರಯೋಗಗಳಿಗೆ ಮುಂದಾಗಬಾರದು. ತಜ್ಞ ವೈದ್ಯರೊಂದಿಗೆ ಸಮಾಲೋಚಿಸಿ ಇತರ ಪರಿಹಾರಗಳನ್ನೂ ಪಡೆಯಬಹುದು.

ಬರೀ ಒಗ್ಗರಣೆಗಲ್ಲ ಜೀರಿಗೆ

ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಜೀರಿಗೆ ಆ್ಯಸಿಡಿಟಿಯನ್ನೂ ದೂರ ಓಡಿಸುತ್ತದೆ. ಬಾಣಂತಿಯರು ಸೇವಿಸಿದರೆ ಎದೆಹಾಲು ಹೆಚ್ಚಿಸುತ್ತದೆ. ಮಗುವಿಗೆ ಹೊಟ್ಟೆನೋವು ಸಹ ಆಗುವುದಿಲ್ಲ. ಉದರ ಸಂಬಂಧೀ ಸಮಸ್ಯೆಗಳಿಗೆ ಜೀರಿಗೆ ರಾಮಬಾಣವೆಂದೇ ಹೇಳಬಹುದು.  
*ಜೀರಿಗೆಯನ್ನು ನುಣ್ಣಗೆ ಪುಡಿ ಮಾಡಿ ತೆಂಗಿನ ಕಾಯಿ ಹಾಲಿನಲ್ಲಿ ಬೆರೆಸಿ ಮೈಗೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಉಗುರು ಬಿಸಿ ನೀರಿನಿಂದ ಸ್ನಾನ ಮಾಡಿದರೆ ಬೆವರು ಗುಳ್ಳೆ ಬರುವುದರಿಲ್ಲ
*ಅಜೀರ್ಣದಿಂದ ಭೇದಿಯಾಗುತ್ತಿದ್ದರೆ ಹುರಿದ ಅಕ್ಕಿ-ತರಿಗೆ ಜೀರಿಗೆ ಪುಡಿ ಹಾಗೂ ಸಕ್ಕರೆ ಅಥವಾ ಉಪ್ಪು ಹಾಕಿ ಗಂಜಿ ತಯಾರಿಸಿ ಸೇವಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ.
*ಜೀರಿಗೆಯನ್ನು ಬಾಯಿಯಲ್ಲಿ ಹಾಕಿಕೊಂಡು ಚೆನ್ನಾಗಿ ಅಗಿದು ತಿನ್ನುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ.
*ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚಿಸುತ್ತದೆ.
*ಜೀರಿಗೆ ಕಷಾಯಕ್ಕೆ ಹಾಲು, ಜೇನುತುಪ್ಪು ಸೇರಿಸಿ ಪ್ರತಿದಿನ ಸೇವಿಸಿದರೆ ಎದೆಹಾಲು ಅಧಿಕವಾಗುವುದು.
*ಮಜ್ಜಿಗೆಗೆ ಜೀರಿಗೆ ಪುಡಿ ಮತ್ತು ಉಪ್ಪು ಹಾಕಿ ಕಲಸಿ ಕುಡಿದರೆ ಪಿತ್ತ ಶಮನವಾಗುತ್ತದೆ.
*ಎರಡು ಚಮಚ ಹುರಿದ ಜೀರಿಗೆಯನ್ನು ಒಂದು ದೊಡ್ಡ ಲೋಟ ನೀರು ಹಾಕಿ ಕುದಿಸಿ, ಅರ್ಧ ಲೋಟಕ್ಕೆ ಇಳಿಸಿ ಅದಕ್ಕೆ ಉಪ್ಪು - ತುಪ್ಪ ಬೆರೆಸಿ ಸೇವಿಸಿದರೆ, ಹೊಟ್ಟೆ ಉಬ್ಬರ, ನೋವು ಗುಣವಾಗುತ್ತದೆ.
*ಹೊಟ್ಟೆ ನೋವು, ವಾಂತಿ ಇದ್ದಾಗ  ಒಂದು ಚಮಚ ಜೀರಿಗೆ , ಒಂದು ಚಮಚ ಏಲಕ್ಕಿ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಅರ್ಧ ಲೋಟಕ್ಕೆ ಇಳಿಸಬೇಕು. ತಣ್ಣಗಾದ ನಂತರ ಅದಕ್ಕೆ ಸಕ್ಕರೆ , ನಿಂಬೆ ಪಾನಕ ಬೆರೆಸಿ ದಿನಕ್ಕೆ ಮೂರು ಸಲ ಸೇವಿಸಿದರೆ ಹೊಟ್ಟೆ ತೊಳೆಸುವುದು ಮತ್ತು ವಾಂತಿ ನಿಲ್ಲುತ್ತದೆ.
*ನೆನೆಸಿದ ಮೆಂತ್ಯದ ಬೀಜ, ಜೀರಿಗೆ , ಉಪ್ಪು ಹಾಗೂ ಖಾರ ಹಾಕಿ ಚಟ್ನಿ ತಯಾರಿಸಿ ಚಪಾತಿ ಜೊತೆ ಸೇವಿಸಿ. ನಂತರ ಹಾಲನ್ನು ಕುಡಿದರೆ ಒಂದು ವಾರದಲ್ಲಿ ಎದೆ ಹಾಲು ಹೆಚ್ಚಾಗುತ್ತದೆ .* ಜೀರಿಗೆ, ಸಕ್ಕರೆ, ಒಣಶುಂಠಿ ಮತ್ತು ಅಡಿಗೆ ಉಪ್ಪು ಇವುಗಳನ್ನು ಒಂದೊಂದು ಟೀ ಚಮಚದಷ್ಟು ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿ ಒಂದು ಲೋಟ ಬಿಸಿ ನೀರಿಗೆ ಹಾಕಿ ಒಂದು ಹೋಳು ನಿಂಬೆಹಣ್ಣಿನ ರಸವನ್ನು ಅದಕ್ಕೆ ಹಿಂಡಿ ಕುಡಿಯುವುದರಿಂದ ಉದರ ಸಂಬಂಧ ರೋಗಗಳು ಗುಣವಾಗವುದು
*ಜೀರಿಗೆ ಹಾಗೂ ಕೊತ್ತಂಬರಿ ಬೀಜವನ್ನು ಹುರಿದು ಪುಡಿ ಮಾಡಿ ಸಕ್ಕರೆ ಮತ್ತು ನೀರು ಸೇರಿಸಿ ಕುಡಿದರೆ ಬಾಯಾರಿಕೆ ನಿವಾರಣೆಯಾಗುತ್ತದೆ .
*ಒಂದು ಲೋಟ ನೀರಿಗೆ ಜಜ್ಜಿದ ಶುಂಠಿ ಮತ್ತು ಕುಟ್ಟಿದ ಜೀರಿಗೆ ಹಾಕಿ ಕುದಿಸಿ, ಸೋಸಿ, ನಿಂಬೆರಸ ಮತ್ತು ಜೇನುತುಪ್ಪವನ್ನು ಬೆರೆಸಿ. ಬೇಕಿದ್ದರೆ ಕಾಳು ಮೆಣಸಿನ ಪುಡಿ ಸೇರಿಸಿ. ಸೇವಿಸಿ. ಇದರಿಂದ ಬೇಸಿಗೆಯ ಸಮಸ್ಯೆಗಳನ್ನು ನಿವಾರಿಸಬಹುದು.
ಜೀರಿಗೆಯ  ಔಷಧ
ಜೀರಿಗೆಯ ಜೊತೆ ಇನ್ನಷ್ಟು ಪದಾರ್ಥಗಳನ್ನು ಸೇರಿಸಿ ಔಷಧ ತಯಾರಿಸಿಕೊಳ್ಳುವ ಬಗ್ಗೆ ಇಲ್ಲಿದೆ ಮಾಹಿತಿ:
* ಅರ್ಧ ಚಮಚ ಜೀರಿಗೆಯನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆರಿಸಿ. ಪ್ರತಿನಿತ್ಯ ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ. 15 ರಿಂದ 20 ದಿನದವರೆಗೆ ಸೇವಿಸುವುದರಿಂದ ಚರ್ಮರೋಗ ಕಡಿಮೆಯಾಗುತ್ತದೆ. ಅರ್ಧ  ಲೋಟ ನೀರಿಗೆ ಅರ್ಧ ಚಮಚ ಜೀರಿಗೆ ಹಾಕಿ, ಕುದಿಸಿ ಶೋಧಿಸಿ ಹಾಲು ಬೆರೆಸಿ ಕಷಾಯ ತಯಾರಿಸಿ ಕುಡಿದರೆ ಆರೋಗ್ಯ ಸುಧಾರಿಸುತ್ತದೆ. ಜೀರಿಗೆ ನೀರು ಮತ್ತು ಜೀರಿಗೆ ಕಷಾಯ ರಕ್ತದ ಒತ್ತಡವನ್ನು ಸರಿ ಪಡಿಸುತ್ತದೆ. ಪಿತ್ತ ಮತ್ತು ಅಜೀರ್ಣದಿಂದ ಆಗುವ ತೊಂದರೆಗಳನ್ನು ಸರಿ ಪಡಿಸುತ್ತದೆ.
* ಒಂದು ಬೊಗಸೆ ಹುರಿದ ಮೆಂತ್ಯ, ಹುರಿದ ಜೀರಿಗೆಗೆ ಒಂದು ಚಮಚ ಹುರಿದ ಕಾಳು ಮೆಣಸು ಸೇರಿಸಿ ಪುಡಿಮಾಡಿ. ಇದನ್ನು ನೀರಿನೊಂದಿಗೆ ನಿತ್ಯ ಸೇವಿಸಿದರೆ ಸಂಧಿವಾತ ಕಡಿಮೆಯಾಗುತ್ತದೆ.
* ಒಂದು ಚಮಚ ಜೀರಿಗೆ ಮತ್ತು ಮೆಂತ್ಯ ರಾತ್ರಿ ನೆನೆಸಿಡಿ. ಬೆಳಗ್ಗೆ ಒಂದು ಹಿಡಿ ಮೆಂತ್ಯದ ಸೊಪ್ಪು ಮತ್ತು ತೆಂಗಿನ ಕಾಯಿ ಹಾಲಿನ ಜೊತೆಗೆ ಇದನ್ನೂ ಸೇರಿಸಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ ಪೇಸ್್ಟ ತಯಾರಿಸಿ. ಈ ಪೇಸ್ಟನ್ನು ತಲೆಗೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಸ್ನಾನ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲಿಗೆ ಹೊಳಪು ಬರುತ್ತದೆ. ತಲೆಹೊಟ್ಟು ಮಾಯವಾಗುತ್ತದೆ.

No comments:

Post a Comment

Anandraj n shivrajkumar